ಕೂಷಿನ ವಿಷಯವಾದ ದೈವೋಕ್ತಿ 
 ೧೮
 ೧ ಓಹೋ, ಕೂಷಿನ ನದಿಗಳ ಆಚೆಯಲ್ಲಿರುವ ಸೀಮೆ, ರೆಕ್ಕೆಗಳನ್ನು ಪಟಪಟನೆ ಬಡಿಯುವ ನಾಡು, 
 ೨ ರಾಯಭಾರಿಗಳನ್ನು ನೀರಿನ ಮೇಲೆ ಬೆಂಡಿನ ದೋಣಿಗಳಲ್ಲಿ ನದಿಯ ಮಾರ್ಗವಾಗಿ ಕಳುಹಿಸುವ ದೇಶ, 
ವೇಗವಾಗಿ ಬರುತ್ತಿರುವ ದೂತರೇ, ಎತ್ತರವಾದವರೂ, ನಯವಾದ ಚರ್ಮವುಳ್ಳವರೂ, 
ಸರ್ವ ಭಯಂಕರರೂ, ಮಹಾ ಬಲದಿಂದ ಶತ್ರುಗಳನ್ನು ತುಳಿಯುವವರೂ, 
ನದಿಗಳಿಂದ ವಿಭಾಗವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರ ಬಳಿಗೆ ಹೋಗಿರಿ. 
 ೩ ಸಮಸ್ತ ಭೂನಿವಾಸಿಗಳೇ, ಲೋಕದ ಸಕಲ ಜನರೇ, 
ಬೆಟ್ಟಗಳಲ್ಲಿ ಧ್ವಜವನ್ನು ಹಾರಿಸುವಾಗ ನೋಡಿರಿ, ತೂತುರಿಯನ್ನೂದುವಾಗ ಕೇಳಿರಿ! 
 ೪ ಯೆಹೋವನು ನನಗೆ ಹೇಳುವುದೇನೆಂದರೆ, “ಬಿಸಿಲಿನಲ್ಲಿ ಜಳಜಳಿಸುವ ದಗೆಯಂತೆಯೂ, 
ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು” ಎಂಬುದೇ. 
 ೫ ಕೊಯ್ಲಿನ ಕಾಲಕ್ಕೆ ಮೊದಲು ಮೊಗ್ಗು ಬಿಟ್ಟಾದ ಮೇಲೆ, ಹೂವಿನಿಂದ ಹೀಚು ದ್ರಾಕ್ಷೆ ದೋರೆ ಕಾಯಿಯಾಗುವಾಗ, 
ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕುವನು. 
 ೬ ಅವೆಲ್ಲವು ಬೆಟ್ಟದ ಪಕ್ಷಿಗಳಿಗೂ, ಭೂಮಿಯ ಕಾಡುಮೃಗಗಳಿಗೂ ಆಹಾರವಾಗಿ ಬಿದ್ದಿರುವವು. 
ಬೇಸಿಗೆಯಲ್ಲಿ ಪಕ್ಷಿಗಳಿಗೂ, ಹಿಮಕಾಲದಲ್ಲಿ ಕಾಡುಮೃಗಗಳಿಗೂ ಆಹಾರವಾಗುವುದು. 
 ೭ ಆ ಕಾಲದಲ್ಲಿ ಎತ್ತರವಾದವರೂ, ನುಣುಪಾದ ಚರ್ಮವುಳ್ಳವರೂ, ಸರ್ವದಾ ಭಯಂಕರರೂ, ಮಹಾ ಬಲದಿಂದ ಶತ್ರುಗಳನ್ನು ತುಳಿಯುವವರೂ, ನದಿಗಳಿಂದ ವಿಭಾಗವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರು ಸೇನಾಧೀಶ್ವರನಾದ ಯೆಹೋವನ ನಾಮ ಮಹತ್ವದ ಚೀಯೋನ್ ಪರ್ವತಕ್ಕೆ, ಆತನಿಗೋಸ್ಕರ ಕಾಣಿಕೆಯನ್ನು ತರುವರು.